ಬೆಂಗಳೂರು,ಜೂನ್, 03: ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆಯುವ ಚುನಾವಣೆಗೆ ಈಗಾಗಲೇ ಕಾಂಗ್ರೆಸ್ ತನ್ನ ಏಳು ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಅಭ್ಯರ್ಥಿಗಳು ಈಗಾಗಲೇ ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಆದ್ರೆ, ವಿಧಾನಪರಿಷತ್ ಟಿಕೆಟ್ ವಿಚಾರವಾಗಿ ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಮುನ್ನ (ಜೂನ್ 02) ವಿಧಾನಪರಿಷತ್ ಚುನಾವಣೆ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಶಾಸಕಾಂಗ ಸಭೆ ನಡೆದಿತ್ತು. ಈ ಸಭೆಗೆ ಕೆಲ ಹಿರಿಯ ಸಚಿವರು ಹಾಜರಾಗದೇ ಗೈರಾಗುವ ಮೂಲಕ ತಮ್ಮ ಅಸಮಾಧಾನಗೊಂಡಿದ್ದಾರೆ. ಸಚಿವರಾದ ಡಾ ಜಿ ಪರಮೇಶ್ವರ್, ಸತೀಶ್ ಜಾರಕಿಹೊಳಿ, ಕೆಎನ್ ರಾಜಣ್ಣ ಮತ್ತು ಜಮೀರ್ ಅಹಮ್ಮದ್ ಖಾನ್ ಶಾಸಕಾಂಗ ಸಭೆಗೆ ಗೈರಾಗಿದ್ದರು. ಈ ಮೂಲಕ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಹುಬ್ಬಳ್ಳಿಯ ತಮ್ಮ ಸಮುದಾಯದಯದ ಇಸ್ಮಾಯಿಲ್ ತಮಟಗಾರ ಅವರಿಗೆ ಪರಿಷತ್ ಟಿಕೆಟ್ ನೀಡಬೇಕೆಂದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮುಂದೆ ಬೇಡಿಕೆ ಇಟ್ಟಿದ್ದರು. ಆದ್ರೆ, ಹೈಕಮಾಂಡ್ ಇಸ್ಮಾಯಿಲ್ ತಮಟಗಾರ ಬದಲಿಗೆ ಅದೇ ಮುಸ್ಲಿಂ ಸಮುದಾಯದ ಶಿವಮೊಗ್ಗ ಮೂಲದ ಬಲ್ಕಿಸ್ ಭಾನು ಅವರಿಗೆ ಮಣೆ ಹಾಕಿದೆ. ಇದರಿಂದ ಜಮೀರ್ ಅಹಮ್ಮದ್ ಖಾನ್ ಅವರ ಕಣ್ಣು ಕೆಂಪಾಗಿಸಿದ್ದು, ಶಾಸಕಾಂಗ ಸಭೆಗೆ ಹಾಜರಾಗದೇ ಪರೋಕ್ಷವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ಗೃಹ ಸಚಿವ ಡಾ ಜಿ ಪರಮೇಶ್ವರ್ ಸಹ ತಮ್ಮ ಅಭಿಪ್ರಾಯ ಕೇಳಿ ಟಿಕೆಟ್ ನೀಡಬೇಕೆಂದು ಈ ಹಿಂದೆಯೇ ಹೇಳಿದ್ದರು. ಆದ್ರೆ, ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಹಿರಿಯ ಸಚಿವರ ಅಭಿಪ್ರಾಯ ಕೇಳದೇ ಏಕಾಂಗಿಯಾಗಿ ತಾವೇ ಸ್ವಯಂ ನಿರ್ಧಾರ ತೆಗೆದುಕೊಂಡು ಹೈಕಮಾಂಡ್ಗೆ ಅಭ್ಯರ್ಥಿಗಳ ಪಟ್ಟಿ ಶಿಫಾರಸ್ಸು ಮಾಡಿರುವುದು ಪರಮೇಶ್ವರ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಪರಮೇಶ್ವರ್ ಹಾಗೂ ರಾಜಣ್ಣ ಅವರು ದಲಿತ, ಅತಿ ಹಿಂದುಳಿದವರಿಗೆ ಟಿಕೆಟ್ ಕೇಳಿದ್ದರು. ಆದರೆ ಹಿರಿಯ ಸಚಿವರ ಯಾವೊಬ್ಬ ಬೆಂಬಲಿಗರಿಗೂ ಮನ್ನಣೆ ಸಿಕ್ಕಿಲ್ಲ. ಹೀಗಾಗಿ ರಾಜಣ್ಣ, ಪರಮೇಶ್ವರ್, ಶಾಸಕಾಂಗ ಸಭೆ ಗೈರಾಗುವ ಮೂಲಕ ಹೈಕಮಾಂಡ್ ನಿರ್ಧಾರಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಮತ್ತೋರ್ವ ಸಚಿವ ಸತೀಶ್ ಜಾರಕಿಹೊಳಿ ಅವರು ಸಹ ಮುಂಬೈ ಕರ್ನಾಟಕ ಭಾಗದವರಿಗೆ ವಿಧಾನಪರಿಷತ್ ಟಿಕೆಟ್ ಕೇಳಿದ್ದರು. ಅವರ ಮನವಿಗೂ ಹೈಕಮಾಂಡ್ ಕ್ಯಾರೇ ಎಂದಿಲ್ಲ. ಹೀಗಾಗಿ ಸತೀಶ್ ಜಾರಕಿಹೊಳಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಧಾರವಾಡದಲ್ಲಿ ಪ್ರತಿಭಟನೆ
ಇಸ್ಮಾಯಿಲ್ ತಮಟಗಾರಗೆ ಕಾಂಗ್ರೆಸ್ MLC ಟಿಕೆಟ್ ಕೈತಪ್ಪಿದ್ದಕ್ಕೆ ಆಕ್ರೋಶ ಭುಗಿಲೆದ್ದಿದೆ. ಧಾರವಾಡದ ಬೆಳಗ್ಗೆ ಅಂಬೇಡ್ಕರ್ ಪ್ರತಿಮೆ ಎದುರು ಇಸ್ಮಾಯಿಲ್ ತಮಟಗಾರ ಬೆಂಬಲಿಗರು ಪ್ರತಿಭಟನೆಗೆ ಯತ್ನಿಸಿದರು. ಆದ್ರೆ, ಲೋಕಸಭಾ ಫಲಿತಾಂಶದ ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಪೊಲೀಸರು, ಪ್ರತಿಭಟನೆಗೆ ಅವಕಾಶ ನೀಡಿಲ್ಲ. ಬಳಿಕ ಪ್ರತಿಭಟನೆಕಾರರು ಧಾರವಾಡದ ಶಿವಗಿರಿ ಕಾಲೋನಿಯಲ್ಲಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಕುಲಕರ್ಣಿ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡರು.