ಬೆಂಗಳೂರು, ಜೂನ್ 24: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಜೈಲು ಪಾಲಾಗಿರುವ ನಟ ದರ್ಶನ್ ಮತ್ತು ಗ್ಯಾಂಗ್ನ ನಾಲ್ವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ತುಮಕೂರು ಸೆಂಟ್ರಲ್ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ರವಿಶಂಕರ್, ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ಆರೋಪಿಗಳ ಸ್ಥಳಾಂತರಕ್ಕೆ 24ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ. ತುಮಕೂರು ಜೈಲಿಗೆ ಸ್ಥಳಾಂತರಕ್ಕೆ ಆರೋಪಿಗಳ ಪರ ವಕೀಲರ ಆಕ್ಷೇಪ ವ್ಯಕ್ತಪಡಿಸಿದರು. ಆರೋಪಿಗಳ ಸ್ಥಳಾಂತರ ಅಗತ್ಯದ ಬಗ್ಗೆ ಕೋರ್ಟ್ಗೆ ಎಸ್ಪಿಪಿ ಪಿ.ಪ್ರಸನ್ನಕುಮಾರ್ ವಿವರಣೆ ನಂತರ ಸ್ಥಳಾಂತರಕ್ಕೆ ಆದೇಶಿಸಲಾಯಿತು.
ರೇಣುಕಾಸ್ವಾಮಿ ನಾವೇ ಕೊಂದಿದ್ದೇವೆಂದು ಹೇಳಿಕೊಂಡು ಮೊದಲು ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ಶರಣಾಗಿದ್ದರು. ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಮೂವರು ಬಾಯ್ಬಿಟ್ಟಿದ್ದರಿಂದ ದರ್ಶನ್ ಮತ್ತು ಗ್ಯಾಂಗ್ ಬಂಧನವಾಗಿತ್ತು.
ನಂತರ ಚಿತ್ರದುರ್ಗ ಡಿವೈಎಸ್ಪಿ ಕಚೇರಿಗೆ ಕಾರು ಚಾಲಕ ರವಿಶಂಕರ್ ಶರಣಾಗಿದ್ದ. ಇಟಿಯೋಸ್ ಕಾರಿನಲ್ಲಿ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದಿದ್ದ. ಟ್ಯಾಕ್ಸಿ ಸಂಘದವರ ಸಹಾಯ ಕೇಳಿಬಂದಿದ್ದ ಚಾಲಕ ರವಿಶಂಕರ್ನನ್ನು ಡಿವೈಎಸ್ಪಿ ಕಚೇರಿಗೆ ಕರೆತಂದು ಟ್ಯಾಕ್ಸಿ ಸಂಘದ ಮುಖಂಡರು ಶರಣಾಗತಿ ಮಾಡಿಸಿದ್ದರು.
ಪರಪ್ಪನ ಅಗ್ರಹಾರದಲ್ಲಿ ದರ್ಶನ್: ಮೌನಕ್ಕೆ ಶರಣು!
ಪರಪ್ಪನ ಅಗ್ರಹಾರದ ಜೈಲಿನ ಭದ್ರತಾ ವಿಭಾಗದ ಬ್ಯಾರಕ್ನ ವಿಶೇಷ ಸೆಲ್ನಲ್ಲಿರುವ ದರ್ಶನ್ ಯಾರೊಂದಿಗೂ ಹೆಚ್ಚಿಗೆ ಮಾತನಾಡದೆ ಮೌನಕ್ಕೆ ಶರಣಾಗಿದ್ದರಂತೆ. ಭಾನುವಾರ ಆಗಿದ್ದರಿಂದ ಯಾರ ಭೇಟಿಗೂ ಅವಕಾಶ ಇರಲಿಲ್ಲ. ಇಂದು ದರ್ಶನ್ ಆಪ್ತರು, ಕುಟುಂಬದವರು ಮತ್ತು ಪವಿತ್ರಾ ಗೌಡ ಫ್ಯಾಮಿಯವರು ಭೇಟಿ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನ ಬಗೆದಷ್ಟೂ ಸ್ಫೋಟಕ ಸಂಗತಿಗಳು ಬಯಲಾಗುತ್ತಿವೆ. ಕೇಸ್ ಮುಚ್ಚಿ ಹಾಕಲು ದರ್ಶನ್ ಗ್ಯಾಂಗ್ ಮಸಲತ್ತು ಮಾಡಿತ್ತು. ಎಲ್ಲೂ ಸಿಕ್ಕಿಹಾಕಿಕೊಳ್ಳಬಾರದು ಅಂತ ವೆಬ್ ಆ್ಯಪ್ ಮೂಲಕ ಮಾತುಕತೆ ನಡೆಸಿದ್ದರು ಅನ್ನೋದು ಗೊತ್ತಾಗಿದೆ. ಹೀಗಾಗಿ ಎಲ್ಲಾ ಮಾತುಕತೆಯ ಡೇಟಾವನ್ನ ರಿಟ್ರೀವ್ ಮಾಡಲು ತನಿಖಾ ತಂಡ ಮುಂದಾಗಿದೆ.