ಮಂಡ್ಯ : ವಿ.ಸಿ. ನಾಲೆ ಮಂಡ್ಯ ಜಿಲ್ಲೆಯ ರೈತರಿಗೆ ಕಾವೇರಿಯನ್ನ ತಲುಪಿಸುವ ಕಾಲುವೆ. ಆದರೆ ಇದೇ ನಾಲೆ ಈಗ ಮೃತ್ಯು ನಾಲೆಯಾಗಿ ಬದಲಾಗಿದೆ. ಸಾಲು ಸಾಲು ದುರಂತಗಳು ಸಂಭವಿಸುತ್ತಿವೆ. ಕಾರು, ಬಸ್ ಸೇರಿದಂತೆ ಬೇರೆ ಬೇರೆ ವಾಹನಗಳು ನಾಲೆಗೆ ಪಲ್ಟಿಯಾಗಿ ಸಾಕಷ್ಟು ಜನರು ಜೀವ ಕಳೆದುಕೊಂಡಿದ್ದಾರೆ. ಹಾಗಾಗಿ ಸಕ್ಕರೆ ನಾಡಿನ ರೈತರ ಜಲದ ಸೆಲೆಯೇ ಈಗ ಸಾವಿನ ನಾಲೆಯಾಗಿದೆ. ಇದೀಗ ವರ್ಷದ ಆರಂಭದಲ್ಲೇ ಘೋರ ದುರಂತ ಒಂದು ಸಂಭವಿಸಿದ್ದು, ಮೂವರು ಬಲಿಯಾಗಿದ್ದಾರೆ. 
2018 ನವೆಂಬರ್ 24ರಂದು ಪಾಂಡವಪುರ ತಾಲೂಕಿನ ಕನಗನಮರಡಿ ಬಳಿಯ ವಿಸಿ ನಾಲೆಗೆ ಬಸ್ ಬಿದ್ದು 31 ಜನರು ಜಲಸಮಾಧಿ ಆಗಿದ್ದರು.
2023 ಜುಲೈ 27ರಂದು ಮಂಡ್ಯ ತಾಲೂಕಿನ ತಿಬ್ಬನಹಳ್ಳಿ ಬಳಿಯ ವಿಸಿ ನಾಲೆಗೆ ಕಾರು ಪಲ್ಟಿಯಾಗಿ ಓರ್ವ ಸಾವನ್ನಪ್ಪಿದ್ದರು.2023 ಜುಲೈ 29ರಂದು ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಬಳಿಯ ವಿಸಿ ನಾಲೆಗೆ ಕಾರು ಬಿದ್ದು ನಾಲ್ವರು ಸಾವನ್ನಪ್ಪಿದ್ದರು.
2023 ನವೆಂಬರ್ 8ರಂದು ಪಾಂಡವಪುರ ತಾಲೂಕಿನ ಬನಘಟ್ಟ ಬಳಿಯ ವಿಸಿ ನಾಲೆಗೆ ಕಾರು ಬಿದ್ದು ತುಮಕೂರು ಮೂಲದ ಐವರು ದುರ್ಮರಣ ಹೊಂದಿದ್ದರು.
2024ರ ಮಾರ್ಚ್ 12ರಂದು ಮಂಡ್ಯ ತಾಲೂಕಿನ ಅವ್ವೇರಹಳ್ಳಿ ಗ್ರಾಮದ ಬಳಿಯ ವಿಸಿ ನಾಲೆಗೆ ಕಾರು ಉರುಳಿ ಓರ್ವ ಸಾವನ್ನಪ್ಪಿದ್ದರು.
2024ರ ಆಗಸ್ಟ್ 5ರಂದು ಪಾಂಡವಪುರ ತಾಲೂಕಿನ ಕಾಳೇನಳ್ಳಿ ಬಳಿ ವಿಸಿ ನಾಲೆಗೆ ಟ್ರಾಕ್ಟರ್ ಪಲ್ಟಿಯಾಗಿ ಓರ್ವ ಮೃತಪಟ್ಟಿದ್ದರು.
2025ರ ಫೆಬ್ರವರಿ 3ರಂದು ಮಂಡ್ಯ ತಾಲೂಕಿನ ಮಾಚಹಳ್ಳಿ ಬಳಿಯ ವಿಸಿ ನಾಲೆಗೆ ಕಾರು ಉರುಳಿ ಬಿದ್ದು ನಾಲ್ವರ ಪೈಕಿ ಮೂವರು ಸಾವನ್ನಪ್ಪಿದ್ದಾರೆ.