ಬಳ್ಳಾರಿ, ಫೆ.27: ಬಡ ಜನರಿಗೆ ಸೇವೆ ಮಾಡಿದರೆ ಅದೇ ಕ್ಷಣ ನಮಗೆ ದೇವರ ಆಶೀರ್ವಾದ ಸಿಗುತ್ತದೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಅವರು ನಗರದ 2ನೇ ವಾರ್ಡಿನ ಪಾಪಯ್ಯ ಸಭಾಂಗಣ ಬಳಿ ಗುರುವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ವೈದೇಹಿ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದಲ್ಲಿ ನಾರಾ ಭರತ್ ರೆಡ್ಡಿ ಅಭಿಮಾನಿ ಬಳಗದ ವತಿಯಿಂದ ಏರ್ಪಡಿಸಿದ್ದ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವೈದ್ಯಕೀಯ ಚಿಕಿತ್ಸೆ ಬಹಳ ದುಬಾರಿ ಆಗಿರುವ ಈ ದಿನಗಳಲ್ಲಿ ಇಂತಹ ಆರೋಗ್ಯ ಶಿಬಿರ ಏರ್ಪಡಿಸಿರುವುದು ಅಭಿನಂದನಾರ್ಹ ಎಂದರು.
ವೈದೇಹಿ ಆಸ್ಪತ್ರೆಯ ಸಂಸ್ಥಾಪಕರು ನಮ್ಮ ಕುಟುಂಬದ ಸ್ನೇಹಿತರು, ಈ ಆಸ್ಪತ್ರೆಯ ಸೇವೆಯನ್ನು ನಾವು ಶ್ಲಾಘಿಸಲೇಬೇಕು ಎಂದು ಹೇಳಿದ ಅವರು ಪ್ರಾಥಮಿಕ ತನಿಖೆಯಲ್ಲಿ ಎಲ್ಲರೂ ಗುಣಮುಖರು ಎಂಬ ವರದಿ ಬರಲಿ, ಯಾರಿಗೂ ಕೂಡ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವ ಸ್ಥಿತಿ ಬಾರದಿರಲಿ ಎಂದೇ ದೇವರಲ್ಲಿ ನಾನು ಕೋರಿಕೊಳ್ಳುವೆ, ಆದರೆ ವಿಧಿ ಬರಹ ತಪ್ಪಿಸಲಾಗದು ಎಂದರು.
ಈ ಆರೋಗ್ಯ ಶಿಬಿರ ಆಯೋಜಿಸಿದವರ ಕಾಳಜಿಯನ್ನು ನೋಡಿ ನಾನೂ ಕೂಡ ಇಂತಹ ಆರೋಗ್ಯ ಶಿಬಿರಗಳನ್ನು ಬಳ್ಳಾರಿ ನಗರದ ಎಲ್ಲ ವಾರ್ಡ್’ಗಳಲ್ಲಿ ಏರ್ಪಡಿಸುವೆ ಎಂದು ಹೇಳಿದರು.
ಸಂಘಟಕ ಅಬ್ದುಲ್ ರಜಾಕ್ ಮಾತನಾಡಿ ಬಳ್ಳಾರಿ ನಗರದ ಯಾವುದೇ ವಾರ್ಡಿನಲ್ಲಿ ಅನಾರೋಗ್ಯ ಪೀಡಿತರಾಗಿರುವ ಬಡವರ ನೆರವಿಗೆ ನಿಲ್ಲುವ ಯೋಜನೆ ಇದೆ, ಉಚಿತವಾಗಿ ಚಿಕಿತ್ಸೆ ಕೊಡಿಸಲಾಗುವುದು, ಈ ಶಿಬಿರದಲ್ಲಿ ತಪಾಸಣೆ ಮಾಡಿಸಿಕೊಂಡು ಶಸ್ತ್ರ ಚಿಕಿತ್ಸೆಯ ಅಗತ್ಯ ಕಂಡು ಬಂದಲ್ಲಿ, ಅಂಥವರಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿಸಲಾಗುವುದು, ಶಾಸಕ ನಾರಾ ಭರತ್ ರೆಡ್ಡಿಯವರ ಬೆಂಬಲದೊಂದಿಗೆ ನಾವು ಈ ಕೆಲಸ ಮಾಡುತ್ತಿದ್ದೇವೆ ಎಂದರು.
ಜಿಲ್ಲಾ ಸರ್ಜನ್ ಡಾ.ಬಸರೆಡ್ಡಿ, ಪಾಪಯ್ಯ, ಶಮೀಮ್ ಜೋಹ್ರಾ, ಲತಾ ಚಾನಾಳ್ ಶೇಖರ್, ವಿಜಯಲಕ್ಷ್ಮೀ, ವೈದೇಹಿ ಆಸ್ಪತ್ರೆಯ ಪ್ರತಿನಿಧಿಗಳು, ಪತ್ರಕರ್ತ ಯಾಳ್ಪಿ ವಲಿಬಾಷ, ಯಶೋಧಾ ಮತ್ತಿತರರು ಹಾಜರಿದ್ದರು.
ವೈದೇಹಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಲ್ಲಿಕಾರ್ಜುನ ಅಚ್ಚೊಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.