ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನಲ್ಲಿ ಹಳ್ಳಿಯೊಂದರಲ್ಲಿ ನಡೆದ ಬಾಲ್ಯ ವಿವಾಹದಲ್ಲಿ ಶಾಸಕ, ಮಾಜಿ ಸಚಿವ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿರುವ ಫೋಟೋಗಳು ವೈರಲ್ ಆಗಿವೆ.
ಬಳ್ಳಾರಿ ಜಿಲ್ಲೆಯ ಕಂಪ್ಲಿ ಶಾಸಕ ಗಣೇಶ,ಹಾಗೂ ಜಿಲ್ಲೆಯ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಭಾಗಿಯಾಗಿರುವ ಫೋಟೋಗಳು ವೈರಲ್ ಆಗಿವೆ. ಖುದ್ದು ಗ್ರಾಪಂ ಸದಸ್ಯನೇ ಮುಂದೆ ನಿಂತು ಮಾಡಿರುವ ಬಾಲ್ಯ ವಿವಾಹ ಇದಾಗಿದ್ದು, ಅನೇಕ ಗಣ್ಯರು ಪಾಲ್ಗೊಂಡಿದ್ದಾರೆ.
ಬಾಲ್ಯ ವಿವಾಹದ ಕುರಿತಂತೆ ಪ್ರಕರಣ ದಾಖಲಿಸದಂತೆ ಹಲವು ಜನಪ್ರತಿನಿಧಿಗಳು ಒತ್ತಡ ಹೇರಿದ್ದ ಆರೋಪ ಕೇಳಿ ಬಂದಿತ್ತು.
ಹೀಗಾಗಿಯೇ ಬಾಲ್ಯ ವಿವಾಹವಾದ ಎರಡು ದಿನದ ಬಳಿಕ ಶುಕ್ರವಾರ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಸದರಿ ಬಾಲ್ಯ ವಿವಾಹದಲ್ಲಿ ವಿವಿಧ ಜನಪ್ರತಿನಿಧಿಗಳು ಖುದ್ದು ಭಾಗವಹಿಸಿರುವುದು ಕಟು ಟೀಕೆಗೆ ಗುರಿಯಾಗಿದೆ.
ಬಾಲ್ಯ ವಿವಾಹ ಕಾನೂನು
ಬಾಲ್ಯ ವಿವಾಹ ನಿಷೇಧ ಕಾಯಿದೆ 2006 ಭಾರತದಲ್ಲಿ 1 ನವೆಂಬರ್ 2007 ರಂದು ಜಾರಿಗೆ ಬಂದಿತು. ಇದು ಬಾಲ್ಯವಿವಾಹಗಳನ್ನು ನಿಷೇಧಿಸುತ್ತದೆ ಮತ್ತು ಬಾಲ್ಯವಿವಾಹದ ಬಲಿಪಶುಗಳಿಗೆ ರಕ್ಷಣೆ ಮತ್ತು ಸಹಾಯವನ್ನು ಒದಗಿಸುತ್ತದೆ. ಇತ್ತೀಚಿನ ವರದಿ ಪ್ರಕಾರ ಪಶ್ಚಿಮ ಬಂಗಾಳ(41.6%), ಬಿಹಾರ (40.8%)ಮತ್ತು ತ್ರಿಪುರಾ(40.1%)ದಲ್ಲಿ ಅತಿ ಹೆಚ್ಚು ಶೇಕಡಾವಾರು ಮಹಿಳೆಯರು 18 ವರ್ಷಕ್ಕಿಂತ ಮೊದಲು ವಿವಾಹವಾಗಿದ್ದಾರೆ. 2021-22ರ ಅವಧಿಯಲ್ಲಿ ಕರ್ನಾಟಕ ರಾಜ್ಯದಲ್ಲಿ 2,819 ಬಾಲ್ಯ ವಿವಾಹ ಪ್ರಕರಣಗಳ ದೂರು ದಾಖಲಾಗಿವೆ. ಈ ಪೈಕಿ 2,401 ವಿವಾಹಗಳನ್ನು ತಪ್ಪಿಸಿದ್ದು, 418 ವಿವಾಹಗಳು ನಡೆದಿವೆ.
ಗ್ರಾಮದ ಮುಖ್ಯಸ್ಥನ ವಿರುದ್ಧ ಕಾನೂನು ಕ್ರಮ: NHRC
ದೇಶದಲ್ಲಿ ಬಾಲ್ಯ ವಿವಾಹಕ್ಕೆ ಕಟ್ಟುನಿಟ್ಟಿನ ಕಡಿವಾಣ ಹಾಕಲು ಮುಂದಾಗಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(NHRC), ಬಾಲ್ಯ ವಿವಾಹ ನಡೆದರೆ ಆ ಗ್ರಾಮದ ಮುಖ್ಯಸ್ಥನ ವಿರುದ್ಧ ಹಾಗೂ ಸಹಾಯ ಮಾಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಶಿಫಾರಸು ಮಾಡಿದೆ. ಪಂಚಾಯ್ ಚುನಾವಣೆಯ ನೀತಿ ಸಂಹಿತೆ ಬದಲಾವಣೆ ಮಾಡಿ, ಬಾಲ್ಯ ವಿವಾಹ ನಡೆದರೆ ಆ ಗ್ರಾಮದ ಸರ್ಪಂಚ್ ರನ್ನೇ ಹೊಣೆಗಾರರನ್ನಾಗಿ ಮಾಡಿ ಎಂದು ಎನ್ಎಚ್ಆರ್ ಸಿ ಪ್ರಧಾನ ಕಾರ್ಯದರ್ಶಿ ಅಂಬುಜ್ ಶರ್ಮಾ ಅವರು ರಾಜಸ್ಥಾನ, ಹರಿಯಾಣ, ಕರ್ನಾಟಕ, ಪಶ್ಚಿಮ ಬಂಗಾಳ ಹಾಗೂ ಬಿಹಾರ ಸೇರಿದಂತೆ ಎಲ್ಲಾ ರಾಜ್ಯಗಳಿಗೆ ಶಿಫಾರಸು ಮಾಡಿದ್ದಾರೆ.