ಬಳ್ಳಾರಿ:ಮೇ.2; ಮಂಗಳೂರಲ್ಲಿ ಕಳೆದ ಗುರುವಾರ ರಾತ್ರಿ ಹಿಂದೂ ಸಂಘಟನೆ ಕಾರ್ಯಕರ್ತ ಕಾಟಿಪಳ್ಳಕೋಡಿಕೆರೆ
ನಿವಾಸಿಯಾಗಿದ್ದ ಸುಹಾಸ್ ಶೆಟ್ಟಿ (42) ಎಂಬಾತನನ್ನು ಭೀಕರವಾಗಿ ಬಜಪೆ ಕಿನ್ನಿಪದವು ಎಂಬಲ್ಲಿ ಕೊಲೆಗೈದಿರೋದನ್ನು ನೋಡಿದರೆ ಇದು ಪೂರ್ವ ನಿಯೋಜಿತ ಕೊಲೆ ಇದು ಕಾಂಗ್ರೆಸ್ ಪಕ್ಷದ ಪೂರ್ವ ನಿಯೋಜಿತ ಕೊಲೆಯಾಗಿದೆ ಎಂದು ಅನುಮಾನ ಮೂಡುತ್ತಿದೆ ಎಂದು ಬಿಜೆಪಿ ಹಿರಿಯ ಧುರೀಣ ಮಾಜಿ ಸಚಿವ ಬಿ. ಶ್ರೀರಾಮುಲು ಅಭಿಪ್ರಾಯ ಪಟ್ಟರು.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ನಡು ರಸ್ತೆಯಲ್ಲಿ ದುಷ್ಕರ್ಮಿಗಳು ಭೀಕರವಾಗಿ ಹಿಂದೂ ಕಾರ್ಯಕರ್ತನನ್ನು ಕೊಲೆಗೈದಿರೋದು ಖಂಡನೀಯ, ರಾಜ್ಯದಲ್ಲಿ ಈ ರೀತಿಯ ಅಹಿತಕರ ಘಟನೆಗಳು ಮರುಕಳುಹಿಸುತ್ತಿರುವುದನ್ನು ನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದೂ ಕಾರ್ಯಕರ್ತರ ಕೊಲೆಗಳು ನಡೆಯುತ್ತಲೇ ಇವೆ. ರಾಜ್ಯದಲ್ಲಿ ಇಂತಹ ಅಹಿತಕರ ಘಟನೆಗಳು ನಡೆದಾಗಲೆಲ್ಲ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಯಾವುದನ್ನೂ ಕೂಡ ಸಿರಿಯಸ್ ಆಗಿ ತೆಗೆದುಕೊಳ್ಳುತ್ತಿಲ್ಲಾ ಅವರು ಬಹಳ ಹಾರಿಕೆಯ ಉತ್ತರವನ್ನು ಕೊಡುತ್ತಿದ್ದಾರೆ ಗೃಹ ಸಚಿವ ಸಂಪೂರ್ಣ ವಿಫಲವಾಗಿದ್ದಾರೆ ಹಾಗಾಗಿ ಅವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಶ್ರೀರಾಮುಲು ಒತ್ತಾಯಿಸಿದರು.
ಮಂಗಳೂರಿನ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಹಿಂದೂ ಕಾರ್ಯಕರ್ತ ಸುಹಾಸ್ ಅವರ ಭೀಕರ ಕೊಲೆ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದೆ ಮತೀಯವಾದಿ ಹಿಂದೂ ವಿರೋಧಿ ರಕ್ಕಸರು ನಡು ರಸ್ತೆಯಲ್ಲೇ ಅಟ್ಟಹಾಸಗೈದು ಕೊಲೆಗೈಯುತ್ತಿರುವ ದೃಶ್ಯ ನಾವು ಯಾವ ನೆಲದಲ್ಲಿ ವಾಸಿಸುತ್ತಿದ್ದೇವೆ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ. ಈ ಅಮಾನುಷ ಘಟನೆಯನ್ನು ತೀವ್ರವಾಗಿ ಖಂಡಿಸುವೆ. ಸುಹಾಸ್ ಬರ್ಬರ ಕೊಲೆಗೀಡಾಗಿರುವ ಘಟನೆಯು ಪೂರ್ವನಿಯೋಜಿತ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ ಈ ಹಿನ್ನೆಲೆಯಲ್ಲಿ ಇದು ಗುಪ್ತಚರ ಇಲಾಖೆಯ ವೈಫಲ್ಯವೋ? ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತವರ ಹೊಣೆಗೇಡಿತನ ಕಾರಣವೋ? ಎಂಬ ಬಗ್ಗೆಯೂ ಸೂಕ್ತ ತನಿಖೆ ನಡೆಯಬೇಕಿದೆ ಎಂದರು.
ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ವಿಧಾನಸಭೆಯ ಸ್ವೀಕರ್ ಯು.ಟಿ.ಖಾದರ್ ರವರೇ ಹೇಳಿದ್ದಾರೆ. ಖಾದರ್ರವರಿಗೆ ಅಂಡರ್ ವರ್ಲ್ಡ್ ನಿಂದ ಜೀವ ಬೆದರಿಕೆ ಇದೆ ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಒಬ್ಬ ವಿಧಾನಸಭಾ ಸ್ವೀಕರ್ಗೆ ಈ ರಾಜ್ಯದಲ್ಲಿ ರಕ್ಷಣೆ ಇಲ್ಲ ಅಂದರೆ ಇನ್ನು ಜನ ಸಾಮಾನ್ಯರ ಪರಿಸ್ಥಿತಿ ಏನೂ ಎಂದು ಬಿ.ಶ್ರೀರಾಮುಲು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಶ್ಮೀರದಲ್ಲಿ ಹಿಂದೂಗಳ ಮಾರಣ ಹೋಮದ ಸುದ್ದಿ ಇನ್ನೂ ಹಸಿಯಾಗಿರುವಾಗಲೇ, ಹಿಂದೂ ಕಾರ್ಯಕರ್ತನನ್ನು ಕೊಚ್ಚಿಕೊಂದಿರುವ ಮಂಗಳೂರು ಘಟನೆಯನ್ನು ಗಮನಿಸಿದರೆ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಕಾಶ್ಮೀರ ಪರಿಸ್ಥಿತಿ ನಿರ್ಮಾಣ ಮಾಡಲು ಹೊರಟಂತೆ ಕಾಣುತ್ತಿದೆ. ಮೇಲಿಂದ ಮೇಲೆ ಕರ್ನಾಟಕದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ, ಹಲ್ಲೆ, ಕೊಲೆಗಳು ನಿರಂತರವಾಗಿ ನಡೆಯುತ್ತಿದ್ದು ರಾಜ್ಯದ ಜನತೆ ತೀವ್ರ ಆತಂಕಿತರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಎಂ.ಗೋವಿಂದರಾಜುಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.