ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ಪಂಚ ಗ್ಯಾರಂಟಿ ಕೇಂದ್ರಿತ ಆಡಳಿತ ನಡೆಸುತ್ತಿದೆ. ಎರಡು ವರ್ಷ ಅಧಿಕಾರ ಪೂರೈಸಿರುವ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳಿಗೆ ಹೆಚ್ಚಿನ ಸಂಪನ್ಮೂಲವನ್ನು ವಿನಿಯೋಗಿಸುತ್ತಿದೆ. ಅಷ್ಟಕ್ಕೂ ಈವರೆಗೆ ಸರ್ಕಾರ ಎಷ್ಟು ಫಲಾನುಭವಿಗಳಿಗೆ ಪಂಚ ಗ್ಯಾರಂಟಿಗಳಿಂದ ಹಣ ಪಾವತಿಸಿದೆ ಎಂಬ ಸಮಗ್ರ ವರದಿ ಇಲ್ಲಿದೆ.
ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನೇ ಕೇಂದ್ರೀಕರಿಸಿ ಕರ್ನಾಟಕ ಮಾದರಿಯ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ ಚುನಾವಣೆ ಸಮಯದಲ್ಲೇ ಪಂಚ ಖಾತರಿ ಯೋಜನೆಗಳ ಆಶ್ವಾಸನೆ ನೀಡಿ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿದಿತ್ತು. ಅದರಂತೆ ಒಂದರ ಹಿಂದೆ ಒಂದರಂತೆ ಐದು ಖಾತ್ರಿ ಯೋಜನೆಗಳನ್ನು ಅನುಷ್ಠಾನ ಮಾಡಿತು. ಇದಕ್ಕಾಗಿ ವಾರ್ಷಿಕ ಸುಮಾರು 50,000 ಕೋಟಿ ರೂ. ಅನುದಾನ ಮೀಸಲಿಟ್ಟು, ಪಂಚ ಗ್ಯಾರಂಟಿ ಸುಗಮ ಅನುಷ್ಠಾನ ಮಾಡುತ್ತಿದೆ. ಎರಡು ವರ್ಷ ಆಡಳಿತ ಪೂರೈಸಿದ ಕಾಂಗ್ರೆಸ್ ಸರ್ಕಾರ ಐದೂ ಖಾತರಿ ಯೋಜನೆಗಳಿಗೆ ಅನುದಾನ ಕೊರತೆಯಾಗದಂತೆ ಸಂಪನ್ಮೂಲ ಸಂಗ್ರಹದ ಕಸರತ್ತು ನಡೆಸುತ್ತಿದೆ.
ಶಕ್ತಿ ಯೋಜನೆ, ಅನ್ನ ಭಾಗ್ಯ, ಗೃಹ ಲಕ್ಷ್ಮಿ, ಗೃಹ ಜ್ಯೋತಿ ಹಾಗೂ ಯುವ ನಿಧಿಯ ಖಾತ್ರಿಯೊಂದಿಗೆ ರಾಜ್ಯದ ಜನರಿಗೆ ಹಣ ಸಂದಾಯ ಮಾಡುತ್ತಿದೆ. ಹಣ ಪಾವತಿ ವಿಳಂಬಗಳೊಂದಿಗೆ ಗೃಹ ಲಕ್ಷ್ಮಿ ಯೋಜನೆ ಟೀಕೆಗೊಳಗಾಗುತ್ತಿದ್ದರೆ, ಉಳಿದಂತೆ ಎಲ್ಲಾ ಖಾತ್ರಿ ಯೋಜನೆಗಳು ಎರಡು ವರ್ಷದಿಂದ ನಿರಂತರವಾಗಿ ಮುಂದುವರಿದಿವೆ. ಬೊಕ್ಕಸದ ಮೇಲೆ ಭಾರೀ ಹೊರೆ ಬಿದ್ದರೂ ಪಂಚ ಗ್ಯಾರಂಟಿಗೆ ಹಣದ ಕೊರತೆಯಾಗದಂತೆ ಕಾಂಗ್ರೆಸ್ ಸರ್ಕಾರ ಕಸರತ್ತು ನಡೆಸುತ್ತಿದೆ.
ಎರಡು ವರ್ಷದಲ್ಲಿ 82,687 ಕೋಟಿ ರೂ. ‘ಖಾತ್ರಿ‘ ವೆಚ್ಚ: ಕಳೆದ ಎರಡು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಾಗಿ ಬರೋಬ್ಬರಿ 82,687 ಕೋಟಿ ರೂ. ಹಣ ವೆಚ್ಚ ಮಾಡಿದೆ. ಈ ಮೂಲಕ ಸಿದ್ದರಾಮಯ್ಯ ಸರ್ಕಾರ ಎರಡು ವರ್ಷದಲ್ಲಿ ಬಹುತೇಕ ಅನುದಾನವನ್ನು ಪಂಚ ಗ್ಯಾರಂಟಿಗೇ ವಿನಿಯೋಗ ಮಾಡಿದೆ. ಪಂಚ ಗ್ಯಾರಂಟಿಗಳ ವೆಚ್ಚದ ಪೈಕಿ ಸಿಂಹ ಪಾಲು ಗೃಹ ಲಕ್ಷ್ಮಿಯದ್ದಾಗಿದೆ.
ಜೂನ್ 2023ರಿಂದ ಪ್ರಾರಂಭವಾದ ಮಹಿಳೆಯರಿಗಾಗಿನ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ರಾಜ್ಯ ಸರ್ಕಾರ ಏಪ್ರಿಲ್ 2025ರ ವರೆಗೆ ಒಟ್ಟು 11,213.27 ಕೋಟಿ ರೂ. ವೆಚ್ಚ ಮಾಡಿದೆ.
ಇನ್ನು ಜುಲೈ 2023ರಿಂದ ಆರಂಭವಾದ ನಗದು ಪಾವತಿಸುವ ಅನ್ನಭಾಗ್ಯ ಯೋಜನೆಗೆ ಡಿಸೆಂಬರ್ 2024ರ ವರೆಗೆ ಸುಮಾರು 11,821 ಕೋಟಿ ರೂ. ಹಣ ಪಾವತಿಸಲಾಗಿದೆ. ಈವರೆಗೆ ಒಟ್ಟು ಸುಮಾರು 72.02 ಕೋಟಿ ಫಲಾನುಭವಿಗಳು ಇದರ ಲಾಭ ಪಡೆದಿದ್ದಾರೆ. ಮಾರ್ಚ್ 2025ರ ಬಳಿಕ ನಗದು ವರ್ಗಾವಣೆ ಬದಲು ಉಚಿತ ಅಕ್ಕಿಯನ್ನೇ ವಿತರಿಸಲಾಗುತ್ತಿದ್ದು, ಏಪ್ರಿಲ್ 2025ರ ವರೆಗೆ 8.44 ಕೋಟಿ ಫಲಾನುಭವಿಗಳಿಗೆ 6,13,090 ಟನ್ ಉಚಿತ ಪಡಿತರ ವಿತರಿಸಿದೆ.
ಆಗಸ್ಟ್ 2023ಕ್ಕೆ ಆರಂಭವಾದ ಗೃಹ ಲಕ್ಷ್ಮಿ ಯೋಜನೆಯಡಿ ಏಪ್ರಿಲ್ 2025ರ ವರೆಗೆ ಬರೋಬ್ಬರಿ 44,376 ಕೋಟಿ ರೂ. ಹಣವನ್ನು ಯಜಮಾನಿಯರ ಖಾತೆಗೆ ಜಮೆ ಮಾಡಲಾಗಿದೆ. ಈವರೆಗೆ ಒಟ್ಟು 1.24 ಕೋಟಿ ಯಜಮಾನಿಯರ ಖಾತೆಗೆ ಧನ ಸಹಾಯ ಜಮೆಯಾಗಿದೆ.
ಅದೇ ರೀತಿ ಆಗಸ್ಟ್ 2023ರಿಂದ ಆರಂಭವಾದ ಗೃಹ ಜ್ಯೋತಿ ಯೋಜನೆಯಡಿ ಮಾರ್ಚ್ 2025ರ ವರೆಗೆ ಒಟ್ಟು ಸುಮಾರು 14,950.77 ಕೋಟಿ ರೂ. ವೆಚ್ಚವಾಗಿದೆ. ಈವರೆಗೆ ಒಟ್ಟು ಸುಮಾರು 1.63 ಕೋಟಿ ಫಲಾನುಭವಿಗಳು ಗೃಹ ಜ್ಯೋತಿಯಡಿ 200 ಯುನಿಟ್ ಉಚಿತ ವಿದ್ಯುತ್ ಲಾಭ ಪಡೆದಿದ್ದಾರೆ.
ಇತ್ತ ಜನವರಿ 2024ರಿಂದ ಆರಂಭವಾದ ಯುವನಿಧಿ ಯೋಜನೆಯಡಿ 326.95 ಕೋಟಿ ರೂ. ಧನಸಹಾಯ ಜಮೆ ಮಾಡಲಾಗಿದೆ. ಈವರೆಗೆ ಒಟ್ಟು 1,88,699 ಫಲಾನುಭವಿಗಳಿಗೆ ಇದರ ಲಾಭ ದೊರಕಿದೆ.
ಜಿಲ್ಲಾವಾರು ಗೃಹ ಲಕ್ಷ್ಮಿ ಜಮೆ ಏನಿದೆ? ಗೃಹ ಲಕ್ಷ್ಮಿ ಯೋಜನೆಯಡಿ ಬಳ್ಳಾರಿಯಲ್ಲಿ 2,88,208 ಫಲಾನುಭವಿಗಳ ಖಾತೆಗೆ 1,042 ಕೋಟಿ, ಬಾಗಲಕೋಟೆ ಜಿಲ್ಲೆಯಲ್ಲಿ 4,09,569 ಫಲಾನುಭವಿಗಳ ಖಾತೆಗೆ 1,491 ಕೋಟಿ ಧನಸಹಾಯ ಜಮೆಯಾಗಿದೆ. ಬೆಳಗಾವಿಯಲ್ಲಿ 11,32,265 ಫಲಾನುಭವಿಗಳಿಗೆ 3,889 ಕೋಟಿ, ಬೆಂಗಳೂರು ನಗರದಲ್ಲಿ 8,85,970 ಫಲಾನುಭವಿಗಳಿಗೆ 3,187 ಕೋಟಿ, ಬೆಂಗಳೂರು ಗ್ರಾಮಾಂತರದಲ್ಲಿ 2,08,377 ಫಲಾನುಭವಿಗಳಿಗೆ 746.92 ಕೋಟಿ ರೂ ಹಣ ಪಾವತಿಯಾಗಿದೆ.
ಬೀದರ್ ನಲ್ಲಿ 3,41,883 ಫಲಾನುಭವಿಗಳಿಗೆ 1,208 ಕೋಟಿ, ಚಾಮರಾಜನಗರದಲ್ಲಿ 2,70,582 ಫಲಾನುಭವಿಗಳಿಗೆ 949 ಕೋಟಿ, ಚಿಕ್ಕಬಳ್ಳಾಪುರದಲ್ಲಿ 2,83,905 ಫಲಾನುಭವಿಗಳಿಗೆ 1,034 ಕೋಟಿ, ಚಿಕ್ಕಮಗಳೂರಲ್ಲಿ 2,62,628 ಫಲಾನುಭವಿಗಳಿಗೆ 886.86 ಕೋಟಿ, ಚಿತ್ರದುರ್ಗದಲ್ಲಿ 3,86,437 ಫಲಾನುಭವಿಗಳಿಗೆ 1,425 ಕೋಟಿ, ವಿಜಯಪುರದಲ್ಲಿ 5,00,329 ಫಲಾನುಭವಿಗಳಿಗೆ 1,787 ಕೋಟಿ ರೂ. ಹಣ ಜಮೆಯಾಗಿದೆ.
ದ.ಕನ್ನಡದಲ್ಲಿ 3,59,396 ಫಲಾನುಭವಿಗಳಿಗೆ 1,245 ಕೋಟಿ, ದಾವಣಗೆರೆಯಲ್ಲಿ 3,61,824 ಫಲಾನುಭವಿಗಳಿಗೆ 1,333 ಕೋಟಿ, ಧಾರವಾಡದಲ್ಲಿ 3,75,183 ಫಲಾನುಭವಿಗಳಿಗೆ 1,358 ಕೋಟಿ, ಗದಗದಲ್ಲಿ 2,47,908 ಫಲಾನುಭವಿಗಳಿಗೆ 890 ಕೋಟಿ, ಹಾಸನದಲ್ಲಿ 4,33,860 ಫಲಾನುಭವಿಗಳಿಗೆ 1,540 ಕೋಟಿ, ಹಾವೇರಿಯಲ್ಲಿ 3,83,720 ಫಲಾನುಭವಿಗಳಿಗೆ 1,402 ಕೋಟಿ, ವಿಜಯನಗರದಲ್ಲಿ 2,90,081 ಫಲಾನುಭವಿಗಳಿಗೆ 1,048 ಕೋಟಿ ರೂ. ಪಾವತಿಯಾಗಿದೆ.
ಕಲಬುರಗಿಯಲ್ಲಿ 5,62,760 ಫಲಾನುಭವಿಗಳಿಗೆ 2,003 ಕೋಟಿ, ಕೊಡಗಿನಲ್ಲಿ 1,16,772 ಫಲಾನುಭವಿಗಳಿಗೆ 409 ಕೋಟಿ, ಕೋಲಾರದಲ್ಲಿ 3,14,493 ಫಲಾನುಭವಿಗಳಿಗೆ 1,143 ಕೋಟಿ, ಕೊಪ್ಪಳದಲ್ಲಿ 3,16,279 ಫಲಾನುಭವಿಗಳಿಗೆ 1,156 ಕೋಟಿ, ಮಂಡ್ಯದಲ್ಲಿ 4,48,092 ಫಲಾನುಭವಿಗಳಿಗೆ 1,590 ಕೋಟಿ, ಉತ್ತರ ಕನ್ನಡದಲ್ಲಿ 3,23,272 ಫಲಾನುಭವಿಗಳಿಗೆ 1,178 ಕೋಟಿ ರೂ. ಜಮೆಯಾಗಿದೆ.
ಮೈಸೂರಲ್ಲಿ 6,72,531 ಫಲಾನುಭವಿಗಳಿಗೆ 2,401 ಕೋಟಿ, ರಾಯಚೂರಲ್ಲಿ 4,34,402 ಫಲಾನುಭವಿಗಳಿಗೆ 1,550 ಕೋಟಿ, ರಾಮನಗರದಲ್ಲಿ 2,69,262 ಫಲಾನುಭವಿಗಳಿಗೆ 1,000 ಕೋಟಿ, ಶಿವಮೊಗ್ಗದಲ್ಲಿ 3,87,646 ಫಲಾನುಭವಿಗಳಿಗೆ 1,429 ಕೋಟಿ, ತುಮಕೂರಲ್ಲಿ 6,78,770 ಫಲಾನುಭವಿಗಳಿಗೆ 2,310 ಕೋಟಿ, ಉಡುಪಿಯಲ್ಲಿ 2,24,733 ಫಲಾನುಭವಿಗಳಿಗೆ 827 ಕೋಟಿ, ಯಾದಗಿರಿಯಲ್ಲಿ 2,54,410 ಫಲಾನುಭವಿಗಳಿಗೆ 908 ಕೋಟಿ ರೂ. ಹಣ ಪಾವತಿಯಾಗಿದೆ.