ಬಳ್ಳಾರಿ,ಫೆ.03 : ಗರ್ಭಿಣಿ ಎಂದು ತಿಳಿದ ಕೂಡಲೆ ಉಚಿತವಾಗಿ ತಾಯಿಕಾರ್ಡ್ನಲ್ಲಿ ನೋಂದಣಿ ಮಾಡಿಸುವ ಜೊತೆಗೆ ರಕ್ತದೊತ್ತಡ ಚಿನ್ಹೆಯಾಗಿರುವ ಪಾದಗಳ ಬಾವುನ್ನು ನಿರ್ಲಕ್ಷಿಸಿಸಬೇಡಿ;ವೈದ್ಯರ ಸಲಹೆಯಂತೆ ಔಷದೋಪಚಾರ ಪಡೆದು ಆಹಾರದಲ್ಲಿ ಬದಲಾವಣೆ ಮೂಲಕ ಗರ್ಭಿಣಿಯರ ಆರೈಕೆಗೆ ಬೆಂಬಲ ನೀಡಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಯಲ್ಲಾ ರಮೇಶ ಬಾಬು ಪಾಲಕರಲ್ಲಿ ವಿನಂತಿಸಿದರು.
ಸೋಮವಾರದಂದು ಎಮ್ಮಿಗನೂರು ಗ್ರಾಮದಲ್ಲಿ ಗರ್ಭಿಣಿ ತಾಯಿಯ ಮನೆ ಭೇಟಿ ಮಾಡಿ ಪಾಲಕರೊಂದಿಗೆ ಮಾತನಾಡುತ್ತಾ, ರಕ್ತದೊತ್ತಡ ವಲ್ಲದೆ ಚೊಚ್ಚುಲು ಗರ್ಭಿಣಿ, ಎತ್ತರ ಕಡಿಮೆ, ದೇಹದ ರಕ್ತದಲ್ಲಿ ಕಬ್ಬಿಣಾಂಶ ಕೊರತೆ, ಅವಳಿಜವಳಿ ಗರ್ಭಣಿ, ವಿವಾಹವಾಗಿ ಐದಕ್ಕಿಂತ ಹೆಚ್ಚು ವರ್ಷಗಳ ನಂತರ ಗರ್ಭಿಣಿಯಾಗಿರುವುದು, ಮೊದಲ ಹೆರಿಗೆ ಸಿಸೇರಿಯನ್, ಮುಂತಾದ ಕಾರಣಗಳಿದ್ದರೂ ಸಹ ಗಂಡಾಂತರಕಾರಿ ಗರ್ಭಿಣಿಯರಾಗುತ್ತಾರೆ, ದಯವಿಟ್ಟು ನಿರ್ಲಕ್ಷಿಸಿಸಬೇಡಿ ಎಂದು ವಿನಂತಿಸಿದರು.
ರಕ್ತಹೀನತೆ ನಿವಾರಣೆಗೆ ಕ್ರಮ:
ತೀವ್ರ ರಕ್ತಹೀನತೆಯಂತಹ ಸನ್ನಿವೇಶದಲ್ಲಿ ಸ್ಥಳೀಯವಾಗಿ ನೀಡುವ ಚಿಕಿತ್ಸೆಯಾದ ಕನಿಷ್ಟ 180 ಕಬ್ಬಿಣಾಂಶ ಮಾತ್ರೆಗಳ ಸೇವನೆ, ವೈದ್ಯರ ಸಲಹೆ ಮೇರೆಗೆ ಐರನ್ ಸುಕ್ರೋಸ್ ಚುಚ್ಚುಮದ್ದು, ಅಗತ್ಯವಿದ್ದರೆ ರಕ್ತ ಹಾಕಿಸುವಿಕೆಯನ್ನು ಸಹ ಮಾಡಲಾಗುವುದು. ಈ ಹಂತದಲ್ಲೂ ಸುಧಾರಣೆಯಾಗದಿದ್ದಲ್ಲಿ ಪ್ರಸೂತಿ ತಜ್ಞರ ಬಳಿ ಖುದ್ದಾಗಿ ಕರೆದು ಕೊಂಡು ಹೊಗಲು ಸಿಬ್ಬಂದಿಯವರಿಗೆ ಸೂಚಿಸಿದರು. ಅಗತ್ಯವಿದ್ದಲ್ಲಿ ಸ್ಕ್ಯಾನ್ ಮಾಡಿಸಬೇಕು.
ಮಕ್ಕಳ ಜನನದ ಅಂತರಕ್ಕಾಗಿ ತಾತ್ಕಾಲಿಕ ವಿಧಾನ ಬಳಕೆ:
ಮೊದಲ ಹೆರಿಗೆ ಶಸ್ತ್ರಚಿಕಿತ್ಸೆ ಮೂಲಕವಾದಲ್ಲಿ ಪುನಃ ಗರ್ಭಿಣಿಯಾಗುವ ಅವಧಿಯನ್ನು ಕನಿಷ್ಟ 3 ವರ್ಷಕ್ಕೆ ಕಡ್ಡಾಯವಾಗಿ ಮುಂದುಡುವುದು, ಇದಕ್ಕಾಗಿ ಅಂತರ ಚುಚ್ಚುಮದ್ದು, ಕಾಪರ-ಟಿ, ನೀರೊಧ ಬಳಸಲು ವಿನಂತಿಸಿದರು.
ಭೇಟಿಯ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ಅರುಣ್ ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಡಿಎನ್ಓ ಗಿರೀಶ್, ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ಬಸವರಾಜ್, ಸಿಬ್ಬಂದಿಯವರಾದ, ಬಸನಗೌಡ, ವಿಘ್ನೇಶ, ಕೃಷ್ಣಮೂರ್ತಿ ಸೇರಿದಂತೆ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಗೀತಾ, ಪೂಜಾ, ನಂದಾ, ಸಿಹೆಚ್ಓ ಸುಧಾ, ಆಶಾ ಕಾರ್ಯಕರ್ತೆಯರು ಇದ್ದರು.