ಬೆಂಗಳೂರು, ಮಾ. 14: ಅಂಗವಿಕಲತೆ ನಿವಾರಣಾ ವೈದ್ಯಕೀಯ ಪರಿಹಾರ ನಿಧಿ ಮತ್ತು ನಿರಾಮಯ ಆರೋಗ್ಯ ವಿಮಾ ಯೋಜನೆಯು ಕರ್ನಾಟಕ ಸರ್ಕಾರದಲ್ಲಿ ಜಾರಿಯಲ್ಲಿವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.
ವಿಧಾನಪರಿಷತ್ ಸದಸ್ಯ. ವೈ.ಎಂ. ಸತೀಶ್ ಅವರು, ಕರ್ನಾಟಕದಲ್ಲಿ ಅಂಗವಿಕಲರಿಗೆ ಸರ್ಕಾರ ನೀಡುವ ಆರೋಗ್ಯ ಮತ್ತು ವಿಮಾ ಯೋಜನೆಗಳ ಕುರಿತು ಶುಕ್ರವಾರ ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು.
ಅಂಗವಿಕಲತೆ ನಿವಾರಣ ವೈದ್ಯಕೀಯ ಪರಿಹಾರ ನಿಧಿ ಯೋಜನೆ ಅಡಿ ಶಸ್ತ್ರಚಿಕಿತ್ಸೆಯಿಂದ ವಿಕಲಚೇತನತೆಯನ್ನು ನಿವಾರಣೆ ಮಾಡಿಕೊಳ್ಳಲು ಅಥವಾ ಕಡಿಮೆ ಮಾಡಿಕೊಳ್ಳಲು ನಗಳೀರಿನ ಸಂಜಯಗಾಂಧಿ ಅಪಘಾತ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಅಥವಾ ಕರ್ನಾಟಕದ ಸುಸಜ್ಜಿತ ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ₹ 1.00 ಲಕ್ಷಗಳವರೆಗೆ ಸಹಾಯಧನವನ್ನು ನೀಡಲಾಗುತ್ತದೆ ಎಂದರು.
ಈ ಯೋಜನೆಯು ಏಪ್ರಿಲ್ ೨೦೦೦ರಲ್ಲಿ ಜಾರಿಯಾಗಿದೆ. ಪ್ರಥಮವಾಗಿ ₹ 15000/-ಗಳ ಸಹಾಯಧನವನ್ನು ನೀಡಲಾಗುತ್ತಿದ್ದು 2008 ರಲ್ಲಿ ಈ ಮೊತ್ತವನ್ನು ₹ 35000/-ಗಳವರೆಗೆ, 2014 ರಲ್ಲಿ ಈ ಮೊತ್ತವನ್ನು ₹ 100.000/- ಗಳಿಗೆ ಹೆಚ್ಚಿಸಿ ವಿಕಲಚೇತನರಿಗೆ ₹ 100.000ಗಳವರೆಗೆ ಹೆಚ್ಚಿಸಿ,
ಶಸ್ತ್ರ ಚಿಕಿತ್ಸಾ ವೆಚ್ಚವನ್ನು ಬರಿಸಲಾಗುತ್ತಿದೆ ಎಂದರು.
ನಿರಾಮಯ ಆರೋಗ್ಯ ವಿಮಾ ಯೋಜನೆ ಅಡಿಯಲ್ಲಿ
ನ್ಯಾಷನಲ್ ಟ್ರಸ್ಟ್ ಆಕ್ಟ್ 1999 ರಡಿ 04 ಬಗೆಯ ವಿಕಲಚೇತನರಿಗೆ ( ಆಟಿಸಂ ಸೆರಬ್ರಲ್ ಪಾಲ್ಸಿ ಬುದ್ಧಿಮಾಂದ್ಯ ಮತ್ತು ಬಹುವಿಧ ಅಂಗವಿಕಲರು) ನಿರಾಮಾಯ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೆ ತಂದಿದ್ದು ಕರ್ನಾಟಕ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ 04 ಬಗೆಯ ವಿಕಲಚೇತನರಿಗೆ ಒಂದು ಬಾರಿ ವಾರ್ಷಿಕ ₹ 250/- ಗಳನ್ನು ಸರ್ಕಾರದ ವಿಮಾಕಂತು ಪಾವತಿಸುತ್ತಿದೆ.
ಪ್ರತಿ ವರ್ಷ ₹ 1.00 ಲಕ್ಷಗಳವರೆಗೆ ಉಚಿತವಾಗಿ ವೈದ್ಯಕೀಯ ಸೌಲಭ್ಯ ಸಿಗಲಿದೆ. ಈ ಮೊತ್ತದಲ್ಲಿ ₹4000/- ಶಸ್ತ್ರ ಚಿಕಿತ್ಸೆ ₹ 15000/- ಶಸ್ತ್ರಚಿಕಿತ್ಸೆ ರಹಿತ ಕಾಯಿಲೆಗಳ ವೆಚ್ಚ ₹ 15000/- ಹೊರರೋಗಿ ವಿಭಾಗದ ವೆಚ್ಚ, ಆರೋಗ್ಯ ತಪಾಸಣೆ ಪರೀಕ್ಷೆಗಳು, ಔಷಧಿಗಳು, ₹ 4000/- ಹಲ್ಲುಗಳಿಗೆ ಸಂಬಂಧಿಸಿದ ವೆಚ್ಚ, ₹20,000/-ಗಳ ಚಾಲ್ತಿಯಲ್ಲಿರುವ ಥೆರಪಿ ₹ 4000/-, ಪರ್ಯಾಯ ಔಷಧಿಗಳು ₹2000/-, ಪ್ರಯಾಣ ವೆಚ್ಚಗಳನ್ನು ಒಳಗೊಂಡಿರುತ್ತದೆ. ಬಡತನ ರೇಖೆಗಿಂತ ಮೇಲ್ಪಟ್ಟ ಕುಟುಂಬದ ವಿಕಲಚೇತನ ವ್ಯಕ್ತಿಗಳು ವಾರ್ಷಿಕ ₹ 500/- ಗಳನ್ನು ಪಾವತಿಸಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆಯ ಕಾಕ್ಲಿಯಾರ್ ಇಂಪ್ಲಾಂಟ್ ಯೋಜನೆ ಅಡಿಯಲ್ಲಿ ನವಜಾತ ಶಿಶುಗಳ ಶ್ರವಣ ತಪಾಸಣೆ ನಡೆಸಿ ಗುರುತು ಹಚ್ಚಿದ ತೀವ್ರತರವಾದ / ಗಂಭೀರ ಸ್ವರೂಪದ ಶ್ರವಣೋಷವುಳ್ಳ 6 ವರ್ಷದ ಕೆಳಗಿನ ಮಕ್ಕಳಿಗೆ ಶ್ರವಣ ಸಾಧನೆಗಳನ್ನು ನೀಡಿ ಟ್ರಯಲ್ ಆಡಿಟರಿ ವರ್ಬಲ್ ಥೆರಪಿಯನ್ನು ಒದಗಿಸಲಾಗುವುದು.
ಶ್ರವಣದೋಷವುಳ್ಳವರಿಗೆ ಸಾಧನಗಳಿಂದ ಸರಿಪಡಿಸಲಾಗದಿದ್ದಲ್ಲಿ ಕಾಕ್ಲಿಯಾರ್ ಇಂಪ್ಯಾಂಟ್ ಶಸ್ತ್ರಚಿಕಿತ್ಸೆ ಸೌಲಭ್ಯ ನೀಡಿ, ಶಸ್ತ್ರಚಿಕಿತ್ಸೆಯ ನಂತರದ 2 ಆಡಿಟರಿವರ್ಬಲ್ ಥೆರಪಿ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸಲಾಗುತ್ತಿದೆ. 2016-17 ನೇ ಸಾಲಿನಿಂದ ಇಲ್ಲಿಯವರೆಗೆ 665 ಫಲಾನುಭವಿಗಳಿಗೆ ಈ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ ಎಂದರು.
ದೇಶದಲ್ಲೇ ಪ್ರಪ್ರಥಮಬಾರಿಗೆ ವಿಕಲಚೇತನ ಮಕ್ಕಳ ಪೋಷಕರಿಗೆ ತಲಾ ೧೦೦೦ ರೂಪಾಯಿ ಗೌರವ ಧನವನ್ನು ಕರ್ನಾಟಕ ಸರ್ಕಾರ ಪಾವತಿಸುತ್ತಿರುವುದು ಶ್ಲಾಘನೀಯ. ಸ್ವಾಗತಾರ್ಹ. ಈ ಮೊತ್ತವನ್ನು ಹೆಚ್ಚಿಸಬೇಕು. ವಿಮಾ ಸೌಲಭ್ಯವು ೧ ಲಕ್ಷ ರೂಪಾಯದ ೫ ಲಕ್ಷ ರೂಪಾಯಿಗೆ ಹೆಚ್ಚಿಸಬೇಕು ಎಂದು ವೈ.ಎಂ. ಸತೀಶ್ ಅವರು ಮನವಿ ಮಾಡಿದರು.