ಬಳ್ಳಾರಿ, ಮಾ.27: ಮಿಲ್ಲರ್ ಪೇಟೆಯ ಸಮುದಾಯ ಭವನವನ್ನು ನವೀಕರಣ ಮಾಡಿ, ಕಪೌಂಡ್ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕ ನಾರಾ ಭರತ್ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
ಸಲಾಂ ಬಳ್ಳಾರಿ ಅಭಿಯಾನದ ಅಂಗವಾಗಿ ನಗರದ 13ನೇ ವಾರ್ಡಿನ ವಿವಿಧ ಬಡಾವಣೆಗಳಲ್ಲಿ ಗುರುವಾರ ಸಂಚಾರ ನಡೆಸಿದರು.
ಇದಕ್ಕೂ ಮುನ್ನ ವಾರ್ಡಿನ ಕಾಂಗ್ರೆಸ್ ಮುಖಂಡರಾದ ರಾಕೇಶ್, ಶಿವಕುಮಾರ್, ರಘು ಅವರು ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪಠ್ಯ ಸಾಮಗ್ರಿಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾದರು. ವಾರ್ಡಿನ ಸರ್ಕಾರಿ ಪ್ರಾಥಮಿಕ ಶಾಲೆಯ 170 ವಿದ್ಯಾರ್ಥಿಗಳಿಗೆ ನೋಟಬುಕ್ ಹಾಗೂ ಕಂಪಾಸ್ ಬಾಕ್ಸ್ ವಿತರಿಸಲಾಯಿತು.
ವಾರ್ಡಿನ ಮಿಲ್ಲರ್ ಪೇಟೆ, ಗಣೇಶ್ ಗುಡಿ, ಕೊರಟಗೇರಿ, ಗಡ್ಡೆ ಕೆಳಗೆ, ಅಬ್ದುಲ್ ಅಜೀಜ್ ಬೀದಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಶಾಸಕ ನಾರಾ ಭರತ್ ರೆಡ್ಡಿ ಸಂಚರಿಸಿ, ಜನರ ಸಮಸ್ಯೆಗಳನ್ನು ಆಲಿಸಿದರು.
ಮಹಾನಗರ ಪಾಲಿಕೆಯ ಅಧಿಕಾರಿಗಳು, ಜೆಸ್ಕಾಂ, ಪೊಲೀಸ್, ಸಂಚಾರಿ ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಅಭಿಯಂತರರು, ಅಧಿಕಾರಿಗಳು ಶಾಸಕ ನಾರಾ ಭರತ್ ರೆಡ್ಡಿಯವರ ಜೊತೆಗೆ ಸಂಚರಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದರು.
ಮನೆಗಳ ಹಕ್ಕು ಪತ್ರ, ರಸ್ತೆ, ಒಳ ಚರಂಡಿ, ಹೊರ ಚರಂಡಿ, ಬೀದಿ ದೀಪ, ಕುಡಿಯುವ ನೀರು, ನೈರ್ಮಲ್ಯ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿ ಜನರು ಶಾಸಕರಿಗೆ ಮನವಿ ಮಾಡಿದರು.
ಮನೆ ಮನೆ ತೆರಳಿ ಜನರ ಸಮಸ್ಯೆ ಆಲಿಸುತ್ತ, ಆಡಳಿತ ವ್ಯವಸ್ಥೆಯನ್ನು ಜನರ ಮನೆ ಬಾಗಿಲಿಗೆ ತಲುಪಿಸಿರುವ ಶಾಸಕ ನಾರಾ ಭರತ್ ರೆಡ್ಡಿಯವರ ಸಲಾಂ ಬಳ್ಳಾರಿ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ರಾಕೇಶ್; ಇದೊಂದು ಐತಿಹಾಸಿಕ ಕಾರ್ಯಕ್ರಮ, ಬಳ್ಳಾರಿಯ ರಾಜಕೀಯ ಇತಿಹಾಸದಲ್ಲಿಯೇ ಯಾವ ನಗರ ಶಾಸಕರೂ ಈ ರೀತಿಯ ಜನಪರ ಕಾರ್ಯಕ್ರಮ ರೂಪಿಸಿಲ್ಲ, ಇದು ಒಂದು ವಿಭಿನ್ನ ಪ್ರಯತ್ನ, ಜನರಿಂದ ಈ ಅಭಿಯಾನಕ್ಕೆ ಒಳ್ಳೆಯ ಸ್ಪಂದನೆ ಸಿಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭ ಮಹಾನಗರ ಪಾಲಿಕೆಯ ಸದಸ್ಯರಾದ ಜಬ್ಬಾರ್, ಎಂ.ರಾಜೇಶ್ವರಿ, ವಿ.ಕುಬೇರಾ, ಕಾಂಗ್ರೆಸ್ ಮುಖಂಡರಾದ ಸುಬ್ಬರಾಯುಡು, ವಿಷ್ಣು ಬೋಯಪಾಟಿ, ವೆಂಕಟೇಶ ಹೆಗಡೆ, ಹೊನ್ನಪ್ಪ, ಶಿವರಾಜ್, ಮಂಜುಳಾ, ಯಶೋಧಾ, ಗಾಜುಲು ಶ್ರೀನಿವಾಸ್, (ಕಪ್ಪೆ) ಶಿವು ಹುಂಡೇಕರ್ ಪ್ರದೀಪ್, ಸುರೇಶ್, ರಸೂಲ್, ತಬ್ರೇಜ್, ಯರಗುಡಿ ಸೋಮಣ್ಣ ಮೊದಲಾದವರು ಹಾಜರಿದ್ದರು.