ಸುವರ್ಣವಾಹಿನಿ ಸುದ್ದಿ
ಬಳ್ಳಾರಿ,ಏ,02 : ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆಗೆ ಹಾಗೂ ದಕ್ಷ ಮತ್ತು ಪ್ರಮಾಣಿಕ ಸೇವೆಯನ್ನು ಪರಿಗಣಿಸಿ ನೀಡಲಾಗುವ ೨೦೨೪ ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಬಳ್ಳಾರಿಯ ಸಂಚಾರಿ ಪೋಲಿಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅಯ್ಯನಗೌಡ ಪಾಟೀಲ್ ಅವರು ಆಯ್ಕೆಯಾಗಿದ್ದಾರೆ.
ಅಯ್ಯನಗೌಡ ಪಾಟೀಲರು ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗುಂಜಿಹಳ್ಳಿ ಗ್ರಾಮದ ವೀರನಗೌಡ ಪಾಟೀಲ್ ಹಾಗೂ ಲಲಿತಮ್ಮರವರ ಪುತ್ರನಾದ ಅಯ್ಯನಗೌಡ ಪಾಟೀಲ್ ಅವರು ೨೦೦೫ ರಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ನೇಮಕಗೊಂಡು ಇಲಾಖೆಗೆ ಸೇರ್ಪಡೆಯಾಗಿದ್ದರು. ರೈತಾಪಿ ಕುಟುಂಬದ ಹಿನ್ನೆಲೆಯ ಅಯ್ಯನಗೌಡ ಪಾಟೀಲರು ಇಲಾಖೆಗೆ ಸೇರಿದ ಬಳಿಕ ಮೈಸೂರಿನಲ್ಲಿ ತರಬೇತಿ ಮುಗಿಸಿದ ನಂತರ ಬೀದರ್ನಲ್ಲಿ ಕೆಲ ತಿಂಗಳುಗಳ ಕಾಲ ಸೇವೆ ಸಲ್ಲಿಸಿದ್ದರು.
ಪ್ರೊಬೇಷನರಿ ಮುಗಿದ ಬಳಿಕ ಬಳ್ಳಾರಿಯ ಮೋಕಾ ಪೋಲಿಸ್ ಠಾಣೆ, ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪೋಲಿಸ್ ಠಾಣೆ, ರಾಯಚೂರಿನ ಮುದಗಲ್ಲು ಪೋಲಿಸ್ ಠಾಣೆ, ಹಾಗೂ ಮಸ್ಕಿ ಪೋಲಿಸ್ ಠಾಣೆಯಲ್ಲಿ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿ, ೨೦೧೬ ರಲ್ಲಿ ಇನ್ಸ್ಪೆಕ್ಟರ್ ಆಗಿ ಬಡ್ತಿ ಪಡೆದ ನಂತರ ಕೆಲವು ತಿಂಗಳುಗಳ ಕಾಲ ಬಾಗಲಕೋಟೆಯ ರೈಲ್ವೆ, ಮೂಧೋಳ ಹಾಗೂ ಹುನಗುಂದ ಪೋಲಿಸ್ ಠಾಣೆಗಳಲ್ಲಿ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡಿದ್ದರು. ಬಳಿಕ ಈಗ ಬಳ್ಳಾರಿಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರು ಜನ ಸ್ನೇಹಿ ಪೋಲಿಸ್ ಅಧಿಕಾರಿಯಾಗಿ ಖ್ಯಾತಿಗಳಿಸಿದ್ದು, ಇಲಾಖೆಯಲ್ಲಿ ಎಲ್ಲಿಯೂ ಹೆಸರು ಕೆಡಿಸಿಕೊಳ್ಳದೆ ದಕ್ಷ ಹಾಗೂ ಪ್ರಾಮಾಣಿಕರಾಗಿ ಸೇವೆ ಸಲ್ಲಿಸಿ ಇಲಾಖೆಯ ಘನತೆ ಗೌರವವನ್ನು ಹೆಚ್ಚಿಸಿದ್ದಾರೆ. ಈ ಕಾರಣಕ್ಕೆ ಇಂದು ಬೆಂಗಳೂರಿನ ಕೊರಮಂಗಲದ ಪೋಲಿಸ್ ಮೈದಾನದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಿನ್ನದ ಪದಕ ನೀಡಿ ಅಯ್ಯನಗೌಡ ಪಾಟೀಲರಿಗೆ ಗೌರವಿಸಿದ್ದಾರೆ. ಈ ಗೌರವಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿಯವರು , ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೆ.ಪಿ.ರವಿಕುಮಾರ್, ಎಸ್.ನವೀನ್ಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.