ಬಳ್ಳಾರಿ,ಜೂ.19 : ತಾಯಿ ಮರಣ ಹಾಗೂ ಶಿಶುವಿನ ಮರಣವನ್ನು ತಡೆಗಟ್ಟಲು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯವರು ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಸೂಕ್ತ ಚಿಕಿತ್ಸೆ ನೀಡಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.
ನಗರದ ಅನಂತಪುರ ರಸ್ತೆಯ ನೂತನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಇವರ ಸಹಯೋಗದೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ತಜ್ಞ ವೈದ್ಯರು, ವೈದ್ಯಾಧಿಕಾರಿಗಳು, ಅಧಿಕಾರಿಗಳು, ಸಿಬ್ಬಂದಿಯವರೊಂದಿಗೆ ತಾಯಿ ಮರಣ ಮತ್ತು ಶಿಶುಮರಣ ಕುರಿತು ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಗರ್ಭಿಣಿ, ಬಾಣಂತಿಯರು ಮತ್ತು ಶಿಶು ಮರಣವನ್ನು ಶೂನ್ಯಕ್ಕೆ ತರಲು ಸೂಕ್ತ ಮುಂಜಾಗ್ರತೆಯೊಂದಿಗೆ ಕ್ರಮವಹಿಸಿ, ಅಗತ್ಯವಿದ್ದಲ್ಲಿ ಮಾತ್ರ ಮೇಲ್ಮಟ್ಟದ ಆಸ್ಪತ್ರೆಗೆ ಮುಂಚಿತವಾಗಿ ಮಾಹಿತಿ ನೀಡಿ ಆಂಬ್ಯುಲೆನ್ಸ್ನೊಂದಿಗೆ ಕಳುಹಿಸಬೇಕು ಎಂದು ತಿಳಿಸಿದರು.
ಮನೆಯಲ್ಲಿ ಹೆರಿಗೆ ಮಾಡಿಸುವುದರಿಂದ ತಾಯಿ ಮಗುವಿಗೆ ಉಂಟಾಗುವ ತೊಂದರೆಗಳ ಬಗ್ಗೆ ಮಾಹಿತಿ ನೀಡಿ ಅರಿವುಮೂಡಿಸಬೇಕು. ಗಂಭೀರ ಸಮಸ್ಯೆಗಳು ಇದ್ದಾಗ ಪಾಲಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮನವರಿಕೆ ಮಾಡಿಕೊಡಬೇಕು ಎಂದರು. ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು ಇರುವ ವೈದ್ಯಕಿಯ ಸೌಲಭ್ಯಗಳ ಬಗ್ಗೆ ಕ್ಷೇತ್ರ ಮಟ್ಟದಲ್ಲಿ ಜಾಗೃತಿ ನೀಡುವಂತೆ ಸೂಚಿಸಿದರು.
ಗರ್ಭಿಣಿ ಎಂದು ತಿಳಿದ ದಿನದಿಂದಲೇ ಗರ್ಭಿಣಿಗೆ ಕಂಡು ಬರಬಹುದಾದ ಸಾಮಾನ್ಯ, ಗಂಭೀರ ಸಮಸ್ಯೆಗಳ ಕುರಿತು ಮುತುವರ್ಜಿ ವಹಿಸಲು ಕ್ಷೇತ್ರ ಮಟ್ಟದ ಸಿಬ್ಬಂದಿಯವರು ಗರ್ಭಿಣಿ ಹಾಗೂ ಸಂಬಂಧಿಸಿದ ಪಾಲಕರೊಂದಿಗೆ ಸಮನ್ವಯ ಮಾಡಿಕೊಂಡು ಸೂಕ್ತ ಸಲಹೆ, ಉಪಚಾರ ನೀಡುವ ಕಾರ್ಯ ಆಗಬೇಕು ಎಂದು ಹೇಳಿದರು.
ಕಬ್ಬಿಣಾಂಶ ಮಾತ್ರೆಗಳನ್ನು ನುಂಗಿಸುವ ಮೂಲಕ ರಕ್ತ ಹೀನತೆ ತಡೆಯಲು ಮತ್ತು ನಿಗದಿತವಾಗಿ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೆಚ್.ಐ.ವಿ ಹೆಚ್ಬಿಸಿಜಿ ಪರೀಕ್ಷೆಯನ್ನು ಕೈಗೊಳ್ಳುವ ಮೂಲಕ, ಸ್ಕ್ಯಾನಿಂಗ್ ಅವಶ್ಯವಿರುವಾಗ ವೈದ್ಯರ ಸಲಹೆಯಂತೆ ಮಾಡಿಸಿ ಮಗುವಿನ ಆರೋಗ್ಯದಲ್ಲಿ ಸಂಭಾವ್ಯ ನ್ಯೂನ್ಯತೆಗಳನ್ನು ಪೂರ್ವದಲ್ಲಿಯೇ ಗುರುತಿಸಿ ತಾಯಿ ಮತ್ತು ಶಿಶುವಿನ ಆರೋಗ್ಯದ ದೃಷ್ಟಿಯಲ್ಲಿ ಗಂಭೀರವಾಗಿ ಪರಿಗಣಿಸಿ ಕಾರ್ಯ ನಿರ್ವಹಿಸಲು ಸೂಚಿಸಿದರು.
ಆಸ್ಪತ್ರೆಯಲ್ಲಿ ಹೆರಿಗೆಯಾದಲ್ಲಿ ಸಹಜ ಹೆರಿಗೆ 48 ಗಂಟೆಗಳ ಕಾಲ, ಸಿಜರಿಯನ್ ಹೆರಿಗೆ ಐದು ದಿನಗಳ ಕಾಲ ಕಡ್ಡಾಯವಾಗಿ ದಾಖಲು ಮಾಡಿಕೊಂಡು ನಿರಂತರವಾಗಿ ತಾಯಿಯ ಆರೋಗ್ಯದ ಕುರಿತು ಪರಿಶೀಲಿಸಿ ವೈದ್ಯರು ಮತ್ತು ಸಿಬ್ಬಂದಿಯವರು ಯಾವುದೇ ಲೋಪವಿಲ್ಲದಂತೆ ಕರ್ತವ್ಯ ನಿರ್ವಹಿಸಲು ತಿಳಿಸಿದರು.
ಸರಕಾರದ ಯೋಜನೆಯಾದ ಜನನಿ ಶಿಶು ಸುರಕ್ಷಾ ಕಾರ್ಯಕ್ರಮ ಯೋಜನೆಯಡಿಯಲ್ಲಿ ದೊರಕುವ ಉಚಿತ ಊಟ, ಔಷಧಿ, ಉಚಿತ ರಕ್ತ,ಪರೀಕ್ಷೆ, ಉಚಿತ ನಗುಮಗು ವಾಹನ ಮೂಲಕ ಮನೆಗೆ ಬಿಡುವ ಕುರಿತು ಹಾಗೂ ಜನನಿ ಸುರಕ್ಷಾ ಯೋಜನೆಯಡಿ ಸಹಾಯಧನವನ್ನು ಅವರ ಖಾತೆಗೆ ಜಮಾವಾಗಿರುವ ಬಗ್ಗೆ ನಿಗಾ ವಹಿಸಲು ತಿಳಿಸಿದರು.
ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ತಾಯಿ ಶಿಶುವಿನ ಮರಣವನ್ನು ಶೂನ್ಯಕ್ಕೆ ತರಲು ಕ್ರಮವಹಿಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಂiÀತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕಣುರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ.ರಮೇಶ್ ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸಾರೆಡ್ಡಿ, ವಿಮ್ಸ್ ಮಕ್ಕಳ ವಿಭಾಗದ ವೈದ್ಯ ಡಾ.ವಿಶ್ವನಾಥ, ಪ್ರಸೂತಿ ವಿಭಾಗದ ವೈದ್ಯ ಡಾ.ವಿರೇಂದ್ರಕುಮಾರ, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಸೇರಿದಂತೆ ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಅಧಿಕಾರಿಗಳು, ತಜ್ಞವೈದ್ಯರು, ವೈದ್ಯಾಧಿಕಾರಿಗಳು, ಸಿಬ್ಬಂದಿಯವರು ಉಪಸ್ಥಿತರಿದ್ದರು.